1
1
ಉಡುಪಿ : ಜಿಲ್ಲೆಯಲ್ಲಿನ ಗರಡಿಗಳಲ್ಲೇ ಅತಿಹೆಚ್ಚು, 700 ವರ್ಷಗಳ ಇತಿಹಾಸವಿರುವ ಪ್ರಮುಖ ಗರಡಿಯಾದ ‘ಗೋಳಿಗರಡಿಯಲ್ಲಿ’ ಜಾತ್ರೆಯ ಸಂಭ್ರಮ ಮನೆಮಾಡಿದೆ. ತುಳುನಾಡಿನ ಇತಿಹಾಸದ ಬಹುಮುಖ್ಯ ಪೌರಾಣಿಕ ವೀರರಾದ ಕೋಟಿ-ಚೆನ್ನಯ್ಯರು ಹಾಗೂ ಪಂಜುರ್ಲಿ ದೈವದ ಸ್ಥಾನವಾಗಿರುವ ಈ ಕ್ಷೇತ್ರಕ್ಕೆ ಜಿಲ್ಲೆಯ ಹಾಗೂ ನೆರೆಯ ಜಿಲ್ಲೆಯಿಂದಲೂ ಸಹಸ್ರಾರು ಭಕ್ತರು ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಂಡು ಪಾವನರಾಗುತ್ತಾರೆ.

ನಾಳೆ ( ಫೆ.22) ರಂದು ನಡೆಯುವ ಜಾತ್ರೆಗೆ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ನಡೆಯಲಿದ್ದು, ಸಂಜೆ ಶಿವರಾಯ ಹಾಗೂ ಅಮ್ಮನವರಿಗೆ ವಿಶೇಷ ಹೂವಿನ ಪೂಜೆಯ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ. ರಾತ್ರಿ 10 ಗಂಟೆಯ ನಂತರ ಭಕ್ತಿಪೂರ್ವಕವಾಗಿ ಗೆಂಡಸೇವೆ ನಡೆಯಲಿದ್ದು ಇದರಲ್ಲೂ ಸಾವಿರಾರು ಜನ ಭಕ್ತರು ಭಾಗಿಯಾಗುವ ನಿರೀಕ್ಷೆಯಿದೆ. ಎರಡು ದಿನಗಳ ಪರ್ಯಂತ ಸುಮಾರು 7000ಕ್ಕೂ ಹೆಚ್ಚು ಭಕ್ತರಿಗೆ ಅನ್ನಸಂತರ್ಪಣೆ ಸೇವೆ ನಡೆಯಲಿದೆ.
ಕರಾವಳಿಯಲ್ಲಿರುವ ಸುಮಾರು 256 ಗರಡಿಗಳಲ್ಲಿ ಅಗ್ರಸ್ಥಾನದಲ್ಲಿರುವ ಗೋಳಿಗರಡಿಗೆ ಸರಿಸುಮಾರು 700-1000 ವರ್ಷಗಳ ಇತಿಹಾಸವಿದೆ. ಹಿಂದೆ ಕ್ಷೇತ್ರವು ಗೋಳಿ ಮರಗಳಿಂದ ಸುತ್ತುವರೆದಿದ್ದರಿಂದ ಕ್ಷೇತ್ರಕ್ಕೆ ‘ಗೋಳಿಗರಡಿ’ ಎಂಬ ಹೆಸರು ಬಂದಿದೆ.
ನಡುರಾತ್ರಿ 2 ಗಂಟೆಯಿಂದ ಕ್ಷೇತ್ರದ ಪ್ರಧಾನ ದೈವವಾದ ಪಂಜುರ್ಲಿಯ ಕೋಲ ಸೇವೆ ನಡೆಯಲಿದ್ದು ಮುಂಜಾನೆಯವರೆಗೂ ಮುಂದುವರಿಯಲಿದೆ. ಇಲ್ಲಿ ಒಟ್ಟು ಐದು ಕುಲ ಪಂಜುರ್ಲಿ ದೈವಗಳಿದ್ದು, ಧರ್ಮಸ್ಥಳದಿಂದ ಬಂದು ನೆಲೆನಿಂತಿರುವ ಮೂಲ ಪಂಜುರ್ಲಿಯ ಕ್ಷೇತ್ರವೂ ಇದಾಗಿದೆ ಎಂಬ ಪ್ರತೀತಿಯಿದೆ.
ಕೋಟಿ-ಚನ್ನಯ್ಯರು ಆರಾಧಿಸುತ್ತಿದ್ದ ಬ್ರಹ್ಮ ಹಾಗೂ ನಾಗನ ಸನ್ನಿಧಿಯೂ ಇಲ್ಲಿರುವುದರಿಂದ ಬ್ರಹ್ಮ ಬೈದರ್ಕಳರಾಗಿ ನೆಲೆನಿಂತಿದ್ದಾರೆ.
ಎಲ್ಲೆಡೆ ನಡೆದುಕೊಂಡುಬಂದಂತೆ ಇಲ್ಲಿಯೂ ಕೂಡ ಗರಡಿಯಲ್ಲಿ ಬಿಲ್ಲವ ಸಮುದಾಯದವರು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದು, ವಂಶಪಾರಂಪರ್ಯವಾಗಿ ಬಂಟ ಸಮುದಾದವರು ಮುಖ್ತೆಸರರಾಗಿ ಆಡಳಿತ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ನಾಳೆ ನಡೆಯುವ ಈ ಜಾತ್ರಾಮಹೋತ್ಸವವು ತುಳುನಾಡಿದ ಆರಾಧನೆ, ಸಂಸ್ಕೃತಿಗಳ ಸಂಗಮವಾಗಿದ್ದು, ಭಕ್ತರು ತಮ್ಮ ಇಷ್ಟಾರ್ಥ ಈಡೇರಿಕೆ ಹಾಗೂ ಕಾರ್ಯಸಿದ್ದಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಲಿದ್ದಾರೆ.
