ಉಡುಪಿ:
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ. ಬ್ಯಾಂಕ್ ಖಾತೆ ಹ್ಯಾಕ್ ಆಗಿದೆ, ಲಾಟರಿ ಅಥವಾ ಉಡುಗೊರೆ ಬಂದಿದೆ ಎಂಬ ಸುಳ್ಳು ಸಂದೇಶಗಳು ಹಾಗೂ ಕರೆಗಳ ಮೂಲಕ ಸೈಬರ್ ವಂಚಕರು ಜನರನ್ನು ಮೋಸಗೊಳಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಂಚಕರು ನಕಲಿ ಲಿಂಕ್ಗಳು, ಫೋನ್ ಕರೆಗಳು ಹಾಗೂ ಮೆಸೇಜ್ಗಳ ಮೂಲಕ OTP ಪಡೆದು ಹಣ ಕದಿಯುವ ಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಯಾವುದೇ ಕಾರಣಕ್ಕೂ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಸೈಬರ್ ವಂಚನೆ ತಪ್ಪಿಸಲು ಪಾಲಿಸಬೇಕಾದ ಕ್ರಮಗಳು!
- ಅಪರಿಚಿತ ವ್ಯಕ್ತಿಗಳಿಂದ ಬರುವ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ.
- ನಿಮ್ಮ ಬ್ಯಾಂಕ್ OTP, ಪಾಸ್ವರ್ಡ್ ಅಥವಾ ಖಾತೆ ವಿವರಗಳನ್ನು ಯಾರಿಗೂ ಹಂಚಿಕೊಳ್ಳಬೇಡಿ.
- ಬ್ಯಾಂಕ್ ಅಥವಾ ಸರ್ಕಾರಿ ಇಲಾಖೆ ಎಂದು ಹೇಳಿಕೊಂಡು ಕರೆ ಬಂದರೂ ಪರಿಶೀಲನೆ ಇಲ್ಲದೆ ಮಾಹಿತಿ ನೀಡಬೇಡಿ.
ತಕ್ಷಣ ಕ್ರಮ ಕೈಗೊಳ್ಳಿ
ಯಾವುದೇ ಸೈಬರ್ ವಂಚನೆಗೆ ಒಳಗಾದಲ್ಲಿ ಅಥವಾ ಅನುಮಾನಾಸ್ಪದ ಕರೆ/ಸಂದೇಶ ಬಂದಲ್ಲಿ ತಕ್ಷಣವೇ 1930 ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬೇಕು ಎಂದು ಉಡುಪಿ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. ತಕ್ಷಣ ದೂರು ನೀಡುವುದರಿಂದ ಹಣ ವಾಪಸು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಸಾರ್ವಜನಿಕರು ಜಾಗೃತರಾಗಿದ್ದು, ಕುಟುಂಬ ಸದಸ್ಯರು ಹಾಗೂ ಹಿರಿಯ ನಾಗರಿಕರಿಗೆ ಕೂಡ ಈ ಕುರಿತು ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
