Popular Posts

ಉಡುಪಿ ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಪ್ರವಾಸೋದ್ಯಮ ಅಭಿವೃದ್ಧಿ: ನಾಲ್ಕು ತಾಣಗಳ ಆಯ್ಕೆ.

Spread the love

ನವೀಕರಿಸಬಹುದಾದ ಇಂಧನ, ಮೂಲಸೌಕರ್ಯ ಮತ್ತು ಜಾಗತಿಕ ಪ್ರಚಾರಕ್ಕೆ ಒತ್ತು.

ಮಣಿಪಾಲ : ಉಡುಪಿ–ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು, ಕೇಂದ್ರ ಸರ್ಕಾರದ ಜಾಗತಿಕ ಸ್ಪರ್ಧಾತ್ಮಕ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ರಾಷ್ಟ್ರೀಯ ಮಿಷನ್ ಅಡಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ನಾಲ್ಕು ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಶನಿವಾರ (ಫೆಬ್ರವರಿ 7) ಮಣಿಪಾಲ್‌ನ ರಜತಾದ್ರಿ ಜಿಲ್ಲಾ ಕಚೇರಿ ಸಂಕೀರ್ಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಕೋಡಿ–ಕನ್ಯಾನ, ಕೋಡಿ–ಕುಂದಾಪುರ, ಬಾರ್ಕೂರು ಕೋಟೆ ಪ್ರದೇಶ ಮತ್ತು ತ್ರಾಸಿ–ಮರವಂತೆಗಳನ್ನು ಗುರುತಿಸಲಾಗಿದ್ದು,
ಇವುಗಳಲ್ಲಿ ಅಂತಿಮವಾಗಿ ಒಂದನ್ನು ಆಯ್ಕೆ ಮಾಡಿ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಆಯ್ಕೆಯಾಗುವ ತಾಣದಲ್ಲಿ ನವೀಕರಿಸಬಹುದಾದ ಇಂಧನ ಬಳಕೆ, ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸಿಗರಿಗಾಗಿ ಜಾಗತಿಕ ಮಟ್ಟದ ಸೌಲಭ್ಯಗಳು, ಅಂತಾರಾಷ್ಟ್ರೀಯ ಪ್ರಚಾರ ಕಾರ್ಯಗಳು
ನಡೆಯಲಿವೆ ಎಂದು ತಿಳಿಸಿದರು.

ದೇಶದಾದ್ಯಂತ 50ಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ಜಾಗತಿಕ ಮಟ್ಟಕ್ಕೆ ತರುವ ಉದ್ದೇಶದಿಂದ ಈ ಮಿಷನ್ ಜಾರಿಗೊಳಿಸಲಾಗುತ್ತಿದೆ. ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದು, ನೈಸರ್ಗಿಕ ಹಾಗೂ ಸಾಂಸ್ಕೃತಿಕ ಸಂಪತ್ತಿನ ಸಂರಕ್ಷಣೆಗೆ ಆದ್ಯತೆ ನೀಡುವುದು ಇದರ ಮುಖ್ಯ ಗುರಿಯಾಗಿದೆ ಎಂದು ಸಂಸದರು ಹೇಳಿದರು.

ಈ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ ದೇಶವ್ಯಾಪಿಯಾಗಿ ಸುಮಾರು ರೂ.300 ಕೋಟಿ ಅನುದಾನವನ್ನು ಮೀಸಲಿಡಲಾಗಿದ್ದು ಖಾಸಗಿ ವಲಯದ ಸಹಭಾಗಿತ್ವಕ್ಕೂ ಉತ್ತೇಜನ ನೀಡಲಾಗುತ್ತದೆ. ಸರ್ಕಾರ ಅಗತ್ಯ ಭೂಮಿಯನ್ನು ಒದಗಿಸಲಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಐಪಿಇ ಗ್ಲೋಬಲ್ ಸಂಸ್ಥೆಯ ಹೇಮಲತಾ ಅವರು ಜಿಲ್ಲೆಯಲ್ಲಿ ಗುರುತಿಸಲಾದ ತಾಣಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ್ ಮಾತನಾಡಿ, ಉಡುಪಿ ಜಿಲ್ಲೆಗೆ 98 ಕಿ.ಮೀ. ಉದ್ದದ ಕರಾವಳಿ ಪ್ರದೇಶ, ಪಶ್ಚಿಮಘಟ್ಟಗಳ ನೈಸರ್ಗಿಕ ಸೌಂದರ್ಯ, ಕೆರೆ-ಕೊಳಗಳು ಹಾಗೂ ಹೊಳೆಗಳು ಇದ್ದು, ಇವು ಜಿಲ್ಲೆಯನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಿವೆ ಎಂದು ಹೇಳಿದರು.

ಈ ಯೋಜನೆಯಿಂದ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ಸಿಗಲಿದ್ದು, ಸ್ಥಳೀಯ ಆರ್ಥಿಕ ಅಭಿವೃದ್ಧಿ ಮತ್ತು ವಿಫುಲ ಉದ್ಯೋಗಾವಕಾಶಗಳಿಗೂ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *