ಕುಂದಾಪುರದಲ್ಲಿ ಟ್ರಾನ್ಸ್ಫಾರ್ಮರ್ ಆಯಿಲ್ ಸೋರಿಕೆ, ಜನರ ಜೀವಕ್ಕೆ ಅಪಾಯದ ಗಂಟೆ

ಸಂಗ್ರಹ ಚಿತ್ರ · KT Media
ಕುಂದಾಪುರ: ನಗರದ ಹೃದಯ ಭಾಗದಲ್ಲಿರುವ PDW ಕಚೇರಿ ಎದುರು, ಬೊಬ್ಬರ್ಯನಕಟ್ಟೆ ದೇವಸ್ಥಾನದ ಸಮೀಪದ ಪ್ರದೇಶದಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ನಿಂದ ಆಯಿಲ್ ಸೋರಿಕೆಯಾಗುತ್ತಿರುವ ಘಟನೆ ಸಾರ್ವಜನಿಕರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಜನಸಂಚಾರ ಹೆಚ್ಚಿರುವ ಈ ಪ್ರದೇಶದಲ್ಲಿ ಸಂಭವಿಸಿರುವ ಈ ನಿರ್ಲಕ್ಷ್ಯ, ವಿದ್ಯುತ್ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಸ್ಥಳೀಯರು ತಿಳಿಸಿರುವಂತೆ, ಟ್ರಾನ್ಸ್ಫಾರ್ಮರ್ನಿಂದ ಸೋರಿಕೆಯಾಗುತ್ತಿರುವ ಆಯಿಲ್ ಅನ್ನು ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಕ್ಯಾನಿನಲ್ಲಿ ಸಂಗ್ರಹ ಮಾಡಲಾಗಿದೆ. ಆದರೆ ಇದು ಸುರಕ್ಷತಾ ಮಾನದಂಡಗಳಿಗೆ ವಿರುದ್ಧವಾಗಿದ್ದು, ಯಾವಾಗ ಬೇಕಾದರೂ ಬೆಂಕಿ ಅವಘಡ ಅಥವಾ ಸ್ಫೋಟ ಸಂಭವಿಸುವ ಭೀತಿ ಇದೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಪಾಯಕಾರಿ ಕ್ರಮ ಕೈಗೊಳ್ಳುವುದು ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯವಲ್ಲದೆ ಇನ್ನೇನು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ರಾನ್ಸ್ಫಾರ್ಮರ್ ಆಯಿಲ್ ಸೋರಿಕೆಯಿಂದ ಉಂಟಾಗಬಹುದಾದ ಅಪಾಯಗಳು ಹಲವು. ಆಯಿಲ್ ವಿದ್ಯುತ್ ಸಾಧನಗಳ ಶೀತೀಕರಣ ಮತ್ತು ಇನ್ಸುಲೇಶನ್ಗೆ ಅತ್ಯಂತ ಮುಖ್ಯವಾದುದು. ಇದು ಸೋರಿಕೆಯಾಗಿದರೆ ಟ್ರಾನ್ಸ್ಫಾರ್ಮರ್ ಹೆಚ್ಚು ಬಿಸಿ ಹಿಡಿದು ಸ್ಫೋಟಿಸುವ ಸಾಧ್ಯತೆ ಇದೆ. ಅಲ್ಲದೆ ಆಯಿಲ್ ನೆಲದಲ್ಲಿ ಹರಿದರೆ ಜಾರಿ ಬೀಳುವ ಅಪಾಯವೂ ಇದೆ. ಮಳೆಯ ಸಮಯದಲ್ಲಿ ಆಯಿಲ್ ನೀರಿನೊಂದಿಗೆ ಬೆರೆತು ವಿದ್ಯುತ್ ಶಾಕ್ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಪರಿಸರದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ.
ಇದಲ್ಲದೆ, ಪ್ರತಿ ವಾರ ಮಂಗಳವಾರ ಇಡೀ ದಿನ ಮೆಂಟೈನನ್ಸ್ ಹೆಸರಿನಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂಬುದರಿಂದ ವ್ಯಾಪಾರಸ್ಥರು ಮತ್ತು ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೂ ಸಮಸ್ಯೆಗಳು ಸರಿಯಾಗದೆ ಇರುವುದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
“ಕುಂದಾಪುರದಲ್ಲಿ ವಿದ್ಯುತ್ ಸುರಕ್ಷತೆ ಪ್ರಶ್ನಾರ್ಥಕವಾಗಿದೆ. ಜನರ ಜೀವಕ್ಕೆ ಅಪಾಯವಾಗುವಂತಹ ಪರಿಸ್ಥಿತಿಯಲ್ಲೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಹಿನ್ನೆಲೆ ಮೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಆಯಿಲ್ ಸೋರಿಕೆಯನ್ನು ತಕ್ಷಣ ನಿಲ್ಲಿಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಸಂಬಂಧಿತ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.
ಸಮಸ್ಯೆಯನ್ನು ಕೂಡಲೇ ಪರಿಷ್ಕರಿಸದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದು, ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Leave a Reply