1
1
ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಮಹಾನ್ ಕ್ರಿಕೆಟಿಗರಿಗೆ ಗೌರವ..!

ಬೆಂಗಳೂರು: ಐತಿಹಾಸಿಕ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಅಂತರಾಷ್ಟ್ರೀಯ ಕ್ರಿಕೆಟ್ ತಾಣವಾಗಿ 50 ವರ್ಷ ಪೂರೈಸಿದ ಸುವರ್ಣ ಮಹೋತ್ಸವದ ಅಂಗವಾಗಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಭಾರತದ ಇಬ್ಬರು ದಿಗ್ಗಜ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರ ಹೆಸರನ್ನು ಕ್ರೀಡಾಂಗಣದ ಎರಡು ಸ್ಟ್ಯಾಂಡ್ಗಳಿಗೆ ನಾಮಕರಣ ಮಾಡಿ ಗೌರವ ಸಲ್ಲಿಸಿದೆ. ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ನೇತೃತ್ವದ ಸಮಿತಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಭಾವುಕರಾದ ‘ದಿ ವಾಲ್’..!
ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್ ಅತ್ಯಂತ ಭಾವುಕರಾಗಿ,
“ಇದು ನನ್ನ ಎರಡನೇ ಮನೆಯಂತಿದೆ. ನನ್ನ ಮನೆಯಲ್ಲಿ ಕಳೆದ ಸಮಯಕ್ಕಿಂತ ಹೆಚ್ಚು ಸಮಯವನ್ನು ನಾನು ಈ ಮೈದಾನದಲ್ಲೇ ಕಳೆದಿದ್ದೇನೆ. ಇಲ್ಲಿ ಗೆಲುವಿನ ಸಂಭ್ರಮವನ್ನೂ, ಸೋಲಿನ ನಿರಾಸೆಯನ್ನೂ ಕಂಡಿದ್ದೇನೆ. ಇಂದು ನಾನು ಏನಾಗಿದ್ದೇನೋ ಅದಕ್ಕೆ ಈ ಮೈದಾನವೇ ಕಾರಣ,” ಎಂದು ನೆನಪಿಸಿಕೊಂಡರು.
ತಂದೆಯ ನೆನಪು.
ತಮ್ಮ ತಂದೆಯನ್ನು ಸ್ಮರಿಸಿದ ದ್ರಾವಿಡ್,
“ನನ್ನ ತಂದೆಗೆ ಕ್ರಿಕೆಟ್ ಎಂದರೆ ಪಂಚಪ್ರಾಣ. ನಾನು ಚಿಕ್ಕವನಿದ್ದಾಗ ಅವರು ನನ್ನನ್ನು ಇಲ್ಲಿಗೆ ಕರೆತಂದು ಪಂದ್ಯಗಳನ್ನು ತೋರಿಸುತ್ತಿದ್ದರು. ಇಂದು ಅವರ ಮಗನ ಹೆಸರೇ ಇಲ್ಲಿನ ಒಂದು ಸ್ಟ್ಯಾಂಡ್ಗೆ ಇಟ್ಟಿರುವುದನ್ನು ನೋಡಲು ಅವರು ಇದ್ದಿದ್ದರೆ ಬಹಳ ಹೆಮ್ಮೆಪಡುತ್ತಿದ್ದರು,” ಎಂದು ಕಣ್ಣೀರಿಟ್ಟರು.
ಕುಂಬ್ಳೆ ಪ್ರತಿಕ್ರಿಯೆ.
ಭಾರತದ ಶ್ರೇಷ್ಠ ಸ್ಪಿನ್ನರ್ ಅನಿಲ್ ಕುಂಬ್ಳೆ ಮಾತನಾಡಿ,
“ಒಂಬತ್ತು ವರ್ಷದ ಬಾಲಕನಾಗಿ ಮೊದಲ ಬಾರಿ ಈ ಕ್ರೀಡಾಂಗಣಕ್ಕೆ ಬಂದಿದ್ದೆ. ಇಂದು ಪೆವಿಲಿಯನ್ ಮೇಲೆ ನನ್ನ ಹೆಸರು ಇರುವುದನ್ನು ನೋಡಿ ಅಪಾರ ಸಂತೋಷವಾಗಿದೆ. ನಮ್ಮ ವೈಯಕ್ತಿಕ ಸಾಧನೆಗಳಿಗಿಂತ ಕರ್ನಾಟಕ ಕ್ರಿಕೆಟ್ ಬೆಳೆದು ಬಂದ ಹಾದಿಯೇ ಮುಖ್ಯ,” ಎಂದು ಅಭಿಪ್ರಾಯಪಟ್ಟರು.
ಶಾಂತ ರಂಗಸ್ವಾಮಿ ಅವರಿಗೆ ಗೌರವ
ಪುರುಷ ಕ್ರಿಕೆಟಿಗರಿಗಷ್ಟೇ ಸೀಮಿತವಾಗದೆ, ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತ ರಂಗಸ್ವಾಮಿ ಅವರ ಹೆಸರನ್ನೂ ಒಂದು ಸ್ಟ್ಯಾಂಡ್ಗೆ ಇಡುವ ಮೂಲಕ KSCA ಮಹಿಳಾ ಕ್ರಿಕೆಟ್ಗೂ ಸಮಾನ ಗೌರವ ನೀಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಸುವರ್ಣ ಮಹೋತ್ಸವದ ಈ ಐತಿಹಾಸಿಕ ಕ್ಷಣ, ಕರ್ನಾಟಕ ಕ್ರಿಕೆಟ್ ಪರಂಪರೆಯ ಮತ್ತೊಂದು ಮಹತ್ವದ ಅಧ್ಯಾಯವಾಗಿ ದಾಖಲಾಗಲಿದೆ.