1
1
ಕುಂದಾಪುರ: ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನರು ಎದುರಿಸುತ್ತಿರುವ ಸಂಕಷ್ಟಕ್ಕೆ ಮತ್ತೊಂದು ನಿದರ್ಶನವಾಗಿ, ಅಂಬ್ಯುಲೆನ್ಸ್ ಅನ್ನು ನೇರವಾಗಿ ಕೃಷಿ ಭೂಮಿಗೆ ಇಳಿಸಿ ರೋಗಿಯ ಪ್ರಾಣ ರಕ್ಷಣೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಪ್ಪಿಕುದ್ರು ಪ್ರದೇಶದಲ್ಲಿ ನಡೆದಿದೆ.
ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಉಪ್ಪಿನ ಕುದ್ರು ಪ್ರದೇಶವು ಬೈಂದೂರು ವಿಧಾನಸಭಾ ಕ್ಷೇತ್ರದ ಭಾಗವಾಗಿದೆ. ಈ ಭಾಗದ ಕಳುವಿನ ಬಾಗಿಲು ಪ್ರದೇಶದಲ್ಲಿ ಸುಮಾರು 35ಕ್ಕೂ ಹೆಚ್ಚು ಕುಟುಂಬಗಳು ಹಲವು ವರ್ಷಗಳಿಂದ ವಾಸವಾಗಿದ್ದರೂ, ಸಮರ್ಪಕ ರಸ್ತೆ ಸಂಪರ್ಕ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದ ದಿನನಿತ್ಯದ ಜೀವನವೇ ಸಂಕಷ್ಟಕರವಾಗಿದೆ. ವಿಶೇಷವಾಗಿ ತುರ್ತು ಪರಿಸ್ಥಿತಿಗಳಲ್ಲಿ ಆಸ್ಪತ್ರೆಗೆ ತಲುಪುವುದು ದೊಡ್ಡ ಸವಾಲಾಗುತ್ತಿದೆ.
ಇತ್ತೀಚೆಗೆ ಇಲ್ಲಿನ ಒಬ್ಬ ಗ್ರಾಮಸ್ಥರಿಗೆ ಹೃದಯಾಘಾತ ಉಂಟಾದ ವೇಳೆ ಪರಿಸ್ಥಿತಿ ಗಂಭೀರವಾಗಿತ್ತು. ಮನೆವರೆಗೂ ವಾಹನ ಸಂಚಾರ ಸಾಧ್ಯವಾಗದ ಕಾರಣ ಕುಟುಂಬಸ್ಥರು ಆತಂಕಕ್ಕೊಳಗಾಗಿ ನೆರವಿಗಾಗಿ ಮೊರೆಯಿಟ್ಟರು. ಕೊನೆಗೆ ತುರ್ತುಸೇವಾ ಸಿಬ್ಬಂದಿ ತಕ್ಷಣ ಸ್ಪಂದಿಸಿ, ಬೆಳೆ ಬೆಳೆದಿದ್ದ ಗದ್ದೆಯ ಮೂಲಕವೇ ಅಂಬ್ಯುಲೆನ್ಸ್ ಅನ್ನು ಚಲಾಯಿಸಿ ರೋಗಿಯನ್ನು ಸ್ಥಳಾಂತರಿಸುವ ಸಾಹಸಕ್ಕೆ ಮುಂದಾದರು. ಕೃಷಿ ಭೂಮಿಯ ಅಸಮತಟ್ಟಾದ ನೆಲವನ್ನು ದಾಟುತ್ತಾ ಅಂಬ್ಯುಲೆನ್ಸ್ ಸಾಗಿದ ದೃಶ್ಯ ಸ್ಥಳೀಯರಿಗೆ ಆಘಾತಕಾರಿಯಾಗಿದ್ದು, ಅಲ್ಲಿದ್ದವರ ಸಹಕಾರದೊಂದಿಗೆ ರೋಗಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಮೂಲಸೌಕರ್ಯಗಳ ಅಗತ್ಯತೆಯ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. ರಸ್ತೆ ಸಂಪರ್ಕದ ಅಭಾವದಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳತ್ತ ಅಧಿಕಾರಿಗಳು ಗಮನ ಹರಿಸಬೇಕೆಂಬ ಆಗ್ರಹ ಸ್ಥಳೀಯರಿಂದ ಕೇಳಿಬರುತ್ತಿದೆ.