Popular Posts

ಕುಂದಾಪುರ ಸಮೀಪ‌ ಮಗುಚಿದ ಮೀನುಗಾರಿಕಾ ದೋಣಿ. ಐವರು ಮೀನುಗಾರರು ಅಪಾಯದಿಂದ ಪಾರು.

Spread the love

ಕುಂದಾಪುರ. ಫೆ26 : ಮೀನುಗಾರಿಕಾ ದೋಣಿಯೊಂದು ಕುಂದಾಪುರ ಸಮೀಪದಲ್ಲಿ ಅರಬ್ಬೀ ಸಮುದ್ರದಲ್ಲಿ ಮುಳುಗಿದ ಘಟನೆ ನಡೆದಿದೆ. ಫೆಬ್ರವರಿ 23 ರ ರಾತ್ರಿ ಮಲ್ಪೆ ಬಂದರಿನಿಂದ ಸಮುದ್ರಕ್ಕಿಳಿದಿದ್ದ ದೋಣಿಗೆ ಫೆಬ್ರವರಿ 24 ರಂದು ಕೆಳಭಾಗಕ್ಕೆ ಯಾವುದೋ ವಸ್ತು ಬಡಿದ ಪರಿಣಾಮ ಎಂಜಿನ್ ಕೋಣೆಗೆ ನೀರು ನುಗ್ಗಿದೆ. ದೋಣಿಯ ಸಿಬ್ಬಂದಿ ಕೈಯಿಂದ ನೀರನ್ನು ಹೊರಹಾಕಲು ಪಟ್ಟ ಪ್ರಯತ್ನ ವಿಫಲವಾಗಿ ಎಂಜಿನ್ ಕಾರ್ಯನಿರ್ವಣೆ ನಿಂತಿದ್ದು, ಅಪಾಯವನ್ನರಿತ ಮೀನುಗಾರರು ಸಹಾಯಕ್ಕಾಗಿ ಮೊರೆ ಹೋದರು.

ರಕ್ಷಣಾ ಕಾರ್ಯ ನಡೆದಿದ್ದು ಹೇಗೆ‌..!

ಮುಳುಗುತ್ತಿದ್ದ ದೋಣಿಯ ಸಮೀಪದಲ್ಲಿಯೇ ಇದ್ದ ‘ ಶ್ರೀ ಕೃಷ್ಣ ’ ದೋಣಿಯ ಮೀನುಗಾರರು ತಕ್ಷಣವೇ ಆಗಮಿಸಿ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿಯ ಸಹಾಯದೊಂದಿಗೆ ಐವರನ್ನೂ ರಕ್ಷಣೆ ಮಾಡಿದರು.

ಹಾನಿಯಾಗಿದ್ದ ದೋಣಿಯನ್ನು ಸುಮಾರು 8-9 ನಾಟಿಕಲ್ ಮೈಲು ದೂರದವರೆಗೂ ಹಗ್ಗದ ಸಹಾಯದಿಂದ ಎಳೆಯಲಾಯಿತಾದರೂ ತೀವ್ರ ಪ್ರಕ್ಷುಬ್ಧ ವಾತಾವರಣವಿದ್ದ ಕಾರಣ ಹಗ್ಗ ತುಂಡಾಗಿ ದೋಣಿ‌ಸಂಪೂರ್ಣವಾಗಿ ಮುಳುಗಿದೆ.

ಮುಳುಗಿದ “ಶ್ರೀ ದುರ್ಗಾಪರಮೇಶ್ವರಿ” ದೋಣಿಯು ಕೆಮ್ಮಣ್ಣು ಮೂಲದ ನಾಗರಾಜ್ ಪುತ್ರನ್ ಅವರಿಗೆ ಸೇರಿದ್ದೆಂದು ತಿಳಿದು ಬಂದಿದೆ. ಮಾಲಿಕರಿಗೆ ಅಂದಾಜು 60-65 ಲಕ್ಷ ರೂ ನಷ್ಟ ಸಂಭವಿಸಿದೆ.
ಈ ಕುರಿತು ಗಂಗೊಳ್ಳಿಯ ಕರಾವಳಿ ಭದ್ರತಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *