1
1
ಕುಂದಾಪುರದ ಕೆರಾಡಿ ಗ್ರಾಮದ ಯುವಕನಾದ ಸನಿತ್ ಶೆಟ್ಟಿ ತನ್ನ ಕ್ರಿಕೆಟ್ ಪಯಣವನ್ನು ಗ್ರಾಮದಲ್ಲಿ ಸ್ನೇಹಿತರೊಂದಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಲೇ ಆರಂಭಿಸಿದ್ದನು. ಜನ್ಮದಿಂದಲೇ ಕಿವಿ ಕೇಳಿಸದೆ ಇದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ,ದಿಟ್ಟ ಸಂಕಲ್ಪ ಮತ್ತು ಪರಿಶ್ರಮದ ಮೂಲಕ ಇದೀಗ ಭಾರತೀಯ ತಂಡಕ್ಕೆ ಆಯ್ಕೆಯಾಗುವ ಮಹತ್ವದ ಸಾಧನೆ ಮಾಡಿರುವುದು ಅನೇಕರಿಗೆ ಪ್ರೇರಣೆ.
ಸನಿತ್ ಶೆಟ್ಟಿ ಫೆಬ್ರವರಿ 18 ರಿಂದ 25 ರವರೆಗೆ ಒಡಿಶಾದ ಕಟಕ್ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಡೆಫ್ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಗೆ ಭಾರತ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾನೆ.
ಭಾರತೀಯ ಡೆಫ್ ಕ್ರಿಕೆಟ್ ಅಸೋಸಿಯೇಷನ್ನ ಪುರುಷರ ತಂಡದಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಆಟಗಾರ ಸನಿತ್. ಬ್ಯಾಟರ್ ಹಾಗೂ ವೇಗದ ಬೌಲಿಂಗ್ ಆಲ್ರೌಂಡರ್ ಆಗಿರುವ ಅವನು ತಂಡಕ್ಕೆ ಬಲ ತುಂಬಲಿದ್ದಾನೆ.

ಸನಿತ್ ಶೆಟ್ಟಿ, ಕೆರಾಡಿ ಗ್ರಾಮದ ಆಟೋ ರಿಕ್ಷಾ ಚಾಲಕ ಸುರೇಂದ್ರ ಶೆಟ್ಟಿ ಹಾಗೂ ಗೃಹಿಣಿ ಶೆಟ್ಟಿ ಹೊಸಗದ್ದೆಯವರ ಪುತ್ರ. ಮೂಡ್ಲಕಟ್ಟೆಯಲ್ಲಿ ಜನಿಸಿದ ಸನಿತ್, ಕುಂದಾಪುರದ ಎಚ್ಎಂಎಂ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಶ್ರೀ ವೆಂಕಟರಮಣ ಹೈಸ್ಕೂಲ್ನಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿ, ಮೂಡ್ಲಕಟ್ಟೆಯ ಐಎಂಜೆ ಪದವಿ ಕಾಲೇಜಿನಲ್ಲಿ ಬಿಸಿಎ ಪದವಿ ಪಡೆದಿದ್ದಾನೆ. ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ.
ಸನಿತ್ ಶೆಟ್ಟಿ ತನ್ನ ಸಾಧನೆಯ ಮೂಲಕ ಗ್ರಾಮೀಣ ಯುವಕರಿಗೆ ಮಾತ್ರವಲ್ಲ, ವಿಶೇಷ ಚೇತನರಿಗೂ ಹೊಸ ವಿಶ್ವಾಸವನ್ನು ತುಂಬುವ ಮಾದರಿಯಾಗಿದ್ದಾನೆ. ಕುಂದಾಪುರದ ಹೆಮ್ಮೆಯ ಪುತ್ರನಾಗಿ ದೇಶಕ್ಕೆ ಕೀರ್ತಿ ತರುವ ಅವನಿಗೆ ನಮ್ಮ ಹಾರ್ದಿಕ ಶುಭಾಶಯಗಳು.